ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ಮಾಡೂರು ಶಾಖೆಯ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಶಿರಡಿ ಸಾಯಿಬಾಬಾ ಮಂದಿರ (ರಿ.) ಮಾಡೂರು, ಶ್ರೀ ಶಾಸ್ತಾರ ಬಳಗ (ರಿ.) ಶ್ರೀ ಶಾಸ್ತಾರ ಮಹಿಳಾ ಮಂಡಳಿ ಮತ್ತು ಭಜಕ ವೃಂದ, ಮಡ್ಯಾರ್ ಹಾಗೂ ಎನ್.ಜಿ. ವಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ, ದೇರಳಕಟ್ಟೆ ಹಾಗೂ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯ ತಂಡದವರಿ೦ದ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವು ಮಾತೃಶ್ರೀ ಕಾಂಪ್ಲೆಕ್ಸ್, ಮಾಡೂರು ಶಾಖೆಯ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷ ತೆಯಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ವೈದ್ಯರಾದ ಡಾ| ಇಮ್ರಾನ್ ಪಾಷಾ ಉದ್ಘಾಟಿಸಿ ಮಾತನಾಡಿ, “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸತತ ನೂರಕ್ಕೂ ಮಿಕ್ಕಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿ, ಸಮಾಜದ ಎಲ್ಲಾ ಜನರಿಗೆ ಉಚಿತ ಸೇವೆಯನ್ನು ಒದಗಿಸುತ್ತ ಬಂದಿದೆ. ಒಂದೇ ದಿನದಲ್ಲಿ ಮಾಡೂರು ಮತ್ತು ಕಸಿಹಿತ್ಲು, ಜಪ್ಪಿನಮೊಗರುವಿನಲ್ಲಿ ಆಯೋಜಿಸಿದ್ದು ಸಂಘದ ವಿಶೇಷತೆ ಎಂದು ಶ್ಲಾಘಿಸಿದರು. ಜನಸಾಮಾನ್ಯರು ತಮ್ಮ ಆರೋಗ್ಯದ ಕಾಳಜಿಯನ್ನು ನೋಡಿಕೊಳ್ಳಬೇಕು ಮತ್ತು ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿ, ಈ ಶಿಬಿರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಹಸಿರು ಕಾರ್ಡನ್ನು ವಿತರಿಸಲಾಗುವುದು. ಶಿಬಿರಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು” ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕಳೆದ ೧೪ ವರ್ಷಗಳಿಂದ ವೈದ್ಯಕೀಯ ಶಿಬಿರವನ್ನು ನಿರಂತರ ಏರ್ಪಡಿಸುತ್ತಿದ್ದು, ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸಂಘವು ೨೦೨೫-೨೬ ನೇ ಸಾಲಿನಲ್ಲಿ ರೂ. ೩೦೫ ಕೋಟಿಗೂ ಮಿಕ್ಕಿ ಠೇವಣಿ, ರೂ. ೨೭೮ ಕೋಟಿಗೂ ಮಿಕ್ಕಿ ಸಾಲ, ಹಾಗೂ ರೂ. ೩.೫ ಕೋಟಿಗೂ ಮಿಕ್ಕಿ ಲಾಭ ಗಳಿಸಿರುವುದು ಸಂಘದ ಪ್ರಗತಿಗೆ ಕಾರಣವಾಗಿದೆ. ಸಂಘದ ೧೦೫ನೇ ಉಚಿತ ವೈದ್ಯಕೀಯ ಶಿಬಿರದ ಯಶಸ್ಸಿಗೆ ಸಹಕರಿಸಿದ ಸಂಘ – ಸಂಸ್ಥೆಗಳಿಗೆ ಕೃತಜ್ನತೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಆನಂದ ಎಸ್ ಕೊಂಡಾಣ, ಶ್ರೀ ರಮಾನಾಥ ಸನಿಲ್, ಶ್ರೀ ಗೋಪಾಲ್ ಎಮ್, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ ಮತ್ತು ಶ್ರೀ ಶಾಸ್ತಾರ ಬಳಗ (ರಿ.) ಶ್ರೀ ಶಾಸ್ತಾರ ಮಹಿಳಾ ಮಂಡಳಿ ಮತ್ತು ಭಜಕ ವೃಂದ, ಮಡ್ಯಾರ್ ಇದರ ಅಧ್ಯಕ್ಷರಾದ ಶ್ರೀ ಸೂರಜ್ ಗಟ್ಟಿ ಕೊಂಡಾಣ, ಶ್ರೀ ಶಾಸ್ತಾರ ಕಟ್ಟೆ ಇದರ ಅರ್ಚಕರಾದ ಶ್ರೀ ಯೋಗೀಶ್ ಪೂಜಾರಿ, ಶ್ರೀ ವನದುರ್ಗಾ ಅಯ್ಯಪ್ಪ ಭಜನಾ ಮಂದಿರ (ರಿ.) ಮಾಡೂರು ಇಲ್ಲಿಯ ಗುರುಸ್ವಾಮಿಯಾದ ಶ್ರೀ ಭಾಸ್ಕರ್, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ, ದೇರಳಕಟ್ಟೆ ಇಲ್ಲಿನ ವೈದ್ಯರಾದ ಡಾ| ಆಯಿಷಾ ಮತ್ತಿತರರು ಉಪಸ್ಥಿತರಿದ್ದರು.
ಈ ಶಿಬಿರದಲ್ಲಿ ಸುಮಾರು ೧೦೦ ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಮಾಡೂರು ಶಾಖೆಯ ಪ್ರಭಾರ ಶಾಖಾಧಿಕಾರಿಯಾದ ಶ್ರೀಮತಿ ಭವ್ಯರವರು ಸ್ವಾಗತಿಸಿ. ಸಂಘದ ಸಿಬ್ಬಂದಿ ಕುಮಾರಿ ರತಿಕ ರವರು ವಂದಿಸಿದರು. ಸಂಘದ ಉಳ್ಳಾಲ ಶಾಖೆಯ ಹಿರಿಯ ಶಾಖಾಧಿಕಾರಿಯಾದ ಶ್ರೀ ಸಚಿನ್ ರವರು ನಿರೂಪಿಸಿದರು.